


ಕಾರ್ಕಳ: ಮಣಿಪಾಲ ಆರೋಗ್ಯ ಕಾರ್ಡ್–2026ರ ನೋಂದಣಿಗೆ ಆಗಸ್ಟ್ 31 ಕೊನೆಯ ದಿನವಾಗಿದ್ದು, ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಮಣಿಪಾಲ ಕಸ್ತೂರ್ಬ ಆಸ್ಪತ್ರೆಯ ಮಾರ್ಕೆಟಿಂಗ್ ವಿಭಾಗದ ವ್ಯವಸ್ಥಾಪಕ ಮೋಹನ್ ಶೆಟ್ಟಿ ಹೇಳಿದರು.
ಕಾರ್ಕಳ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರಿಗೆ ಆರೋಗ್ಯ ಕಾರ್ಡ್ ವಿತರಿಸಿ ಮಾತನಾಡಿದರು.
ಕಳೆದ 26 ವರ್ಷಗಳಿಂದ ಈ ಯೋಜನೆ ಸಾರ್ವಜನಿಕರಿಗೆ ಆರೋಗ್ಯ ಸೇವೆಯಲ್ಲಿ ನೆರವಾಗುತ್ತಿದ್ದು, ಪ್ರಸ್ತುತ ಸುಮಾರು 6.5 ಲಕ್ಷ ಸದಸ್ಯರು ಇದರ ಪ್ರಯೋಜನ ಪಡೆಯುತ್ತಿದ್ದಾರೆ ಎಂದರು.
ಮಾಹೆ ಸಮೂಹ ಆಸ್ಪತ್ರೆಗಳಲ್ಲಿ ವಿವಿಧ ಆರೋಗ್ಯ ಸೇವೆಗಳಿಗೆ ರಿಯಾಯಿತಿ ಒದಗಿಸುವ ಈ ಕಾರ್ಡ್ ನೋಂದಣಿಯ ನಂತರ ತಿಂಗಳ 15ನೇ ತಾರೀಖಿನಿಂದ ಜಾರಿಗೆ ಬರಲಿದ್ದು, 2027ರ ಆಗಸ್ಟ್ 15ರವರೆಗೆ ಮಾನ್ಯವಾಗಿರುತ್ತದೆ. ವೈಯಕ್ತಿಕ ಸದಸ್ಯತ್ವಕ್ಕೆ ವಾರ್ಷಿಕ ₹350, ಕೌಟುಂಬಿಕ ಸದಸ್ಯತ್ವಕ್ಕೆ ₹700 ಹಾಗೂ ಕೌಟುಂಬಿಕ ಪ್ಲಸ್ ಸದಸ್ಯತ್ವಕ್ಕೆ ₹900 ಶುಲ್ಕ ನಿಗದಿಪಡಿಸಲಾಗಿದೆ.
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ತಜ್ಞ ವೈದ್ಯರ ಸಮಾಲೋಚನಾ ಶುಲ್ಕದಲ್ಲಿ ಶೇ.50, ಪ್ರಯೋಗಾಲಯ ಪರೀಕ್ಷೆಗಳಲ್ಲಿ ಶೇ.25 ಹಾಗೂ ರೇಡಿಯಾಲಜಿ ಸೇವೆಗಳಲ್ಲಿ ಶೇ.20ರಷ್ಟು ರಿಯಾಯಿತಿ ಸೇರಿದಂತೆ ಹಲವು ಸೌಲಭ್ಯಗಳನ್ನು ಕಾರ್ಡ್ ಸದಸ್ಯರು ಪಡೆಯಬಹುದಾಗಿದೆ. ಮಣಿಪಾಲ, ಉಡುಪಿ, ಕಾರ್ಕಳ, ಮಂಗಳೂರು, ಅತ್ತಾವರ ಹಾಗೂ ಕಟೀಲು ಸೇರಿದಂತೆ ಮಾಹೆ ಸಮೂಹ ಆಸ್ಪತ್ರೆಗಳು, ಮಣಿಪಾಲ ದಂತ ಮತ್ತು ಆಯುರ್ವೇದ ಆಸ್ಪತ್ರೆಗಳಲ್ಲಿಯೂ ಕಾರ್ಡ್ನ ಪ್ರಯೋಜನ ಪಡೆಯಬಹುದು.
ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ ವ್ಯವಸ್ಥಾಪಕ ನಟೇಶ್ ಮಾತನಾಡಿ, ಕಾರ್ಕಳದ ರೋಟರಿ ಆಸ್ಪತ್ರೆ 24 ಗಂಟೆಗಳ ಕಾಲ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಸುಸಜ್ಜಿತ ಆಸ್ಪತ್ರೆಯಾಗಿ ಅಭಿವೃದ್ಧಿಗೊಳ್ಳುತ್ತಿದೆ. ಹೆಚ್ಚಿನ ವೈದ್ಯಕೀಯ ಸೌಲಭ್ಯಗಳು ಹಾಗೂ ಸೇವೆಗಳು ಕಾರ್ಕಳದಲ್ಲೇ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಆಸ್ಪತ್ರೆಯು ವಿಮಾ ಸೌಲಭ್ಯಗಳೊಂದಿಗೆ ಎನ್ಎಬಿಎಚ್ ಮಾನ್ಯತೆಯಡಿ ಉತ್ತಮ ಆರೋಗ್ಯ ಸೇವೆ ನೀಡುತ್ತಿದೆ. ಕಾರ್ಕಳದ ಬಹುನಿರೀಕ್ಷಿತ ರಕ್ತನಿಧಿ (ಬ್ಲಡ್ ಬ್ಯಾಂಕ್) ಸೆಪ್ಟೆಂಬರ್ ಅಂತ್ಯದ ವೇಳೆಗೆ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಮಾರ್ಕೆಟಿಂಗ್ ವಿಭಾಗದ ಸಚಿನ್ ಕಾರಂತ್, ಆಶ್ಲೋನ್, ಅನಿಲ್ ಮತ್ತಿತರರು ಉಪಸ್ಥಿತರಿದ್ದರು. RSS ಕುರಿತು ಇಬ್ಬರು ಗೃಹ ಸಚಿವರ ಹೇಳಿಕೆ ಒಂದೇ: ವಿ. ಸುನಿಲ್ ಕುಮಾರ್
ಕಾರ್ಕಳ: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಸಂಘಟನೆ ಕುರಿತು ಕಾಂಗ್ರೆಸ್ ನಾಯಕರು ಟೀಕೆ ಮಾಡುತ್ತಿರುವ ಬೆನ್ನಲ್ಲೇ, ವಿಧಾನ ಪರಿಷತ್ತಿನಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ನೀಡಿರುವ ಉತ್ತರವನ್ನು ಉಲ್ಲೇಖಿಸಿ ಕಾರ್ಕಳ ಶಾಸಕ ಹಾಗೂ ಮಾಜಿ ಸಚಿವ ವಿ. ಸುನಿಲ್ ಕುಮಾರ್ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
RSS ಶಾಖೆ ಹಾಗೂ ಪಥಸಂಚಲನ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿಧಾನ ಪರಿಷತ್ತಿನಲ್ಲಿ ಉತ್ತರಿಸಿದ್ದಾರೆ. 2025ರಲ್ಲಿ ಅಂದಿನ ಗೃಹ ಸಚಿವ ಡಾ. ಜಿ. ಪರಮೇಶ್ವರ ಕೂಡ ಇದೇ ರೀತಿಯ ಉತ್ತರ ನೀಡಿದ್ದರು. ಹೀಗಾಗಿ ಇಬ್ಬರು ಗೃಹ ಸಚಿವರ ಉತ್ತರಗಳು ಒಂದೇ ಆಗಿವೆ ಎಂದು ಸುನಿಲ್ ಕುಮಾರ್ ಹೇಳಿದ್ದಾರೆ.
ದಿನಬೆಳಗಾದರೆ RSS ಸಂಘಟನೆ ವಿರುದ್ಧ ದ್ವೇಷದ ಮಾತುಗಳನ್ನು ಆಡುವ ಪ್ರಿಯಾಂಕ್ ಖರ್ಗೆ, ಸದನದಲ್ಲಿ ಸಂಘದ ಕುರಿತು ನೀಡಿರುವ ಉತ್ತರವನ್ನು ಗಮನಿಸಬೇಕು. RSS ಶಾಖೆ ಮತ್ತು ಪಥಸಂಚಲನಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂಬುದನ್ನು ಅವರದೇ ಉತ್ತರ ಸ್ಪಷ್ಟಪಡಿಸಿದೆ ಎಂದು ಅವರು ತಿಳಿಸಿದ್ದಾರೆ.
“ಗೋಬೆಲ್ಸ್ ಕಾಂಗ್ರೆಸ್” ನಾಯಕರು ನೂರು ಸುಳ್ಳುಗಳನ್ನು ಹೇಳಿದರೂ RSSನ ಸಂಸ್ಕಾರಕ್ಕೆ ಧಕ್ಕೆ ತರಲು ಸಾಧ್ಯವಿಲ್ಲ. ಸಂಘದ ಕುರಿತು ದ್ವೇಷದ ಪ್ರಚಾರ ಮಾಡುವ ಬದಲು, ಸದನದಲ್ಲಿ ನೀಡಿರುವ ಅಧಿಕೃತ ಉತ್ತರವನ್ನು ಕಾಂಗ್ರೆಸ್ ನಾಯಕರು ಗಮನಿಸಬೇಕು ಎಂದು ಸುನಿಲ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.