


ಕಳಸ : ಕುದುರೆಮುಖ–ಸಂಸೆ ವ್ಯಾಪ್ತಿಯಲ್ಲಿ ಆಗಸ್ಟ್ 15 ಮತ್ತು 16ರಂದು ‘Bangalore Adventures’ ವತಿಯಿಂದ ಆಯೋಜಿಸಲಾಗಿದೆ ಎನ್ನಲಾದ ‘Kudremukh Off-road Adventure’ ಜೀಪ್ ಆಫ್ರೋಡಿಂಗ್ ಚಟುವಟಿಕೆಯನ್ನು ತಕ್ಷಣ ತಡೆಹಿಡಿಯುವಂತೆ ಆಗ್ರಹಿಸಿ ಕೂವೆ ನಿವಾಸಿ ನಾಗರಾಜ ಕೂವೆ ಅವರು ಸಂಸೆ ಗ್ರಾಮ ಪಂಚಾಯಿತಿ, ಕುದುರೆಮುಖ ವನ್ಯಜೀವಿ ವಿಭಾಗ, ಕಳಸ ಪ್ರಾದೇಶಿಕ ಅರಣ್ಯ ವಿಭಾಗ ಹಾಗೂ ಕುದುರೆಮುಖ ಮತ್ತು ಕಳಸ ಪೊಲೀಸ್ ಠಾಣೆಗಳಿಗೆ ದೂರು ಸಲ್ಲಿಸಿದ್ದಾರೆ.
ಬೆಂಗಳೂರಿನ ನೆಲಮಂಗಲದಿಂದ ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖದವರೆಗೆ ಜೀಪ್ಗಳಲ್ಲಿ ಪ್ರಯಾಣ ನಡೆಸಲಾಗುತ್ತಿದ್ದು, ಆಫ್ರೋಡ್ ಸೆಷನ್ನಲ್ಲಿ ಅರಣ್ಯ ಮಾರ್ಗಗಳು, ನದಿ ದಾಟುವಿಕೆ, ಮಣ್ಣಿನ ಹಾಗೂ ಕಲ್ಲಿನ ದಾರಿಗಳು, ಕಠಿಣ ಆಫ್ರೋಡ್ ಮಾರ್ಗಗಳು ಮತ್ತು ವೀಕ್ಷಣಾ ಸ್ಥಳಗಳನ್ನು ಒಳಗೊಂಡ ಸಾಹಸ ಚಟುವಟಿಕೆಗಳನ್ನು ನಡೆಸುವುದಾಗಿ ಪ್ರಚಾರ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ಯಾವುದೇ ಪ್ರಾಧಿಕಾರದಿಂದ ಆಯೋಜಕರು ಲಿಖಿತ ಅನುಮತಿ ಪಡೆದಿರುವ ಬಗ್ಗೆ ಮಾಹಿತಿ ಇಲ್ಲದ ಹಿನ್ನೆಲೆಯಲ್ಲಿ, ಅನುಮತಿಯಿಲ್ಲದೆ ಚಟುವಟಿಕೆ ನಡೆಸದಂತೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಬಿ. ಖಂಡ್ರೆ ಅವರು ಆ.12ರಂದು ಹೊರಡಿಸಿರುವ ಆದೇಶವನ್ನೂ ನಾಗರಾಜ ಕೂವೆ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆಫ್ರೋಡಿಂಗ್ ಚಟುವಟಿಕೆಗಳಿಂದ ಗ್ರಾಮೀಣ ರಸ್ತೆಗಳು ಹಾಳಾಗುವುದು, ಬೆಟ್ಟಗಳ ಮೇಲ್ಮೈ ಮಣ್ಣು ಸವಕಳಿ ಉಂಟಾಗಿ ಜಲಮೂಲಗಳಿಗೆ ಹೂಳು ಸೇರುವುದು, ಶಬ್ದ ಹಾಗೂ ವಾಯುಮಾಲಿನ್ಯ ಹೆಚ್ಚಾಗುವುದು ಮತ್ತು ಜೀವಿಜಂತುಗಳಿಗೆ ಅಪಾಯ ಉಂಟಾಗುವ ಸಾಧ್ಯತೆಗಳ ಬಗ್ಗೆ ಸಚಿವರು ಎಚ್ಚರಿಕೆ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ನದಿ, ತೊರೆ, ಕಾಲುವೆ ಸೇರಿದಂತೆ ಕುಡಿಯುವ ನೀರಿನ ಜಲಮೂಲಗಳಲ್ಲಿ ಸಾಹಸಿ ವಾಹನಗಳು ಸಂಚರಿಸಿ ನೀರು ಕಲುಷಿತಗೊಳಿಸದಂತೆ ಹಾಗೂ ಗ್ರಾಮೀಣ ರಸ್ತೆಗಳು ಹಾಳಾಗದಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆಫ್ರೋಡಿಂಗ್ಗಾಗಿ ಬಳಸುವ ವಾಹನಗಳಿಗೆ ಪರಿವರ್ತಿತ ದಪ್ಪ ಟೈರ್ಗಳನ್ನು ಅಳವಡಿಸಿರುವುದರಿಂದ ಮಳೆಗಾಲದಲ್ಲಿ ಮಣ್ಣು ಮತ್ತು ಬೆಟ್ಟದ ಮೇಲ್ಮೈ ಸವಕಳಿ ಹೆಚ್ಚಾಗುವ ಸಾಧ್ಯತೆಯಿದೆ. ಮಣ್ಣು ಜಲಮೂಲಗಳಿಗೆ ಕೊಚ್ಚಿಕೊಂಡು ಹೋಗುವುದರಿಂದ ಕೆರೆ, ಕಟ್ಟೆ ಹಾಗೂ ಸರೋವರಗಳಲ್ಲಿ ಹೂಳು ಹೆಚ್ಚಾಗಿ ನೀರಿನ ಸಂಗ್ರಹಣಾ ಸಾಮರ್ಥ್ಯ ಕುಸಿಯಬಹುದು. ಮಾರ್ಪಡಿಸಿದ ಸೈಲೆನ್ಸರ್ಗಳಿರುವ ಜೀಪುಗಳ ಕರ್ಕಶ ಶಬ್ದ, ಸೈರನ್ ಹಾಗೂ ವಾಹನಗಳಿಂದ ಹೊರಸೂಸುವ ಹೊಗೆ ಸೂಕ್ಷ್ಮ ಪರಿಸರಕ್ಕೆ ಧಕ್ಕೆ ಉಂಟುಮಾಡಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ‘Night Party’, ‘Live DJ’ ಮುಂತಾದ ಚಟುವಟಿಕೆಗಳು ನಡೆದರೆ ಪ್ರದೇಶದ ಶಾಂತಿಗೂ ಧಕ್ಕೆಯಾಗುವ ಸಾಧ್ಯತೆಯಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮಕ್ಕೆ ಹಲವು ವಾಹನಗಳು ಹಾಗೂ ನೂರಾರು ಮಂದಿ ಸೇರುವ ಸಾಧ್ಯತೆಯಿದ್ದು, ಪ್ಲಾಸ್ಟಿಕ್, ಆಹಾರ ತ್ಯಾಜ್ಯ, ಮದ್ಯದ ಬಾಟಲಿಗಳು ಸೇರಿದಂತೆ ಹೆಚ್ಚಿನ ಪ್ರಮಾಣದ ತ್ಯಾಜ್ಯ ಉತ್ಪತ್ತಿಯಾಗಬಹುದು. ಇದರಿಂದ ಮಣ್ಣು, ನೀರಿನ ಮೂಲಗಳು ಮತ್ತು ಅರಣ್ಯ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.
ಕುದುರೆಮುಖ ಮತ್ತು ಸಂಸೆ ವ್ಯಾಪ್ತಿಯಲ್ಲಿ ಕಾಡುಕೋಣಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇತ್ತೀಚೆಗೆ ಆನೆಗಳ ಓಡಾಟವೂ ಕಂಡುಬಂದಿದೆ ಎನ್ನಲಾಗಿದೆ. ಇಂತಹ ಸೂಕ್ಷ್ಮ ಪರಿಸರ ಪ್ರದೇಶದಲ್ಲಿ ಭಾರಿ ಸಂಖ್ಯೆಯ ವಾಹನಗಳ ಸಂಚಾರ ಮತ್ತು ಶಬ್ದದಿಂದ ವನ್ಯಜೀವಿಗಳ ಸಹಜ ವರ್ತನೆಗೆ ಧಕ್ಕೆ ಉಂಟಾಗಬಹುದು. ಇದರಿಂದ ಮುಂದಿನ ದಿನಗಳಲ್ಲಿ ಮಾನವ–ವನ್ಯಜೀವಿ ಸಂಘರ್ಷದ ಅಪಾಯವೂ ಹೆಚ್ಚಬಹುದು ಎಂದು ನಾಗರಾಜ ಕೂವೆ ಆತಂಕ ವ್ಯಕ್ತಪಡಿಸಿದ್ದಾರೆ. ಕಳೆದ ಒಂದೂವರೆ ವರ್ಷದಲ್ಲಿ ಮಲೆನಾಡು ಭಾಗದಲ್ಲಿ ಆನೆ ದಾಳಿಯಿಂದ 12ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಕಾಡುಕೋಣಗಳ ದಾಳಿಯಿಂದಲೂ ಹಲವು ಮಂದಿ ಮೃತಪಟ್ಟಿರುವ ಹಾಗೂ ಗಾಯಗೊಂಡಿರುವ ಘಟನೆಗಳು ನಡೆದಿವೆ. ಇಂತಹ ಪರಿಸ್ಥಿತಿಯಲ್ಲಿ ಯಾವುದೇ ಅವಘಡ ಸಂಭವಿಸಿದರೆ ಸ್ಥಳೀಯ ರೈತರು ಮತ್ತು ಕೂಲಿ ಕಾರ್ಮಿಕರೇ ಮೊದಲಿಗೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಕಳಸ, ಕುದುರೆಮುಖ ಮತ್ತು ಸಂಸೆ ಸುತ್ತಮುತ್ತ ನಡೆಯುತ್ತಿರುವ ಅನಧಿಕೃತ ಆಫ್ರೋಡಿಂಗ್ ಚಟುವಟಿಕೆಗಳ ಮೇಲೂ ಕಠಿಣ ಕ್ರಮ ಕೈಗೊಳ್ಳಬೇಕು. ಅನಧಿಕೃತವಾಗಿ ಆಫ್ರೋಡಿಂಗ್ ಪ್ರಚಾರ ಮಾಡುವ ವ್ಯಕ್ತಿಗಳು, ಕ್ಲಬ್ಗಳು, ರೆಸಾರ್ಟ್ಗಳು ಹಾಗೂ ಹೋಂಸ್ಟೇಗಳ ವಿರುದ್ಧ ಪ್ರಕರಣ ದಾಖಲಿಸಬೇಕು. ಅರಣ್ಯ ಪ್ರದೇಶಗಳಲ್ಲಿ ನೈಟ್ ಸಫಾರಿ ನಡೆಸುವವರ ವಿರುದ್ಧವೂ ಕಾನೂನು ಕ್ರಮ ಜರುಗಿಸಬೇಕು ಎಂದು ನಾಗರಾಜ ಕೂವೆ ಆಗ್ರಹಿಸಿದ್ದಾರೆ.
ಆ.15 ಮತ್ತು 16ರಂದು ನಡೆಯಲಿದೆ ಎನ್ನಲಾದ ಜೀಪ್ ಆಫ್ರೋಡಿಂಗ್ ಕಾರ್ಯಕ್ರಮಕ್ಕೆ ಸ್ಥಳೀಯ ಆಡಳಿತ ತಕ್ಷಣ ನಿಷೇಧ ಹೇರಬೇಕು. ಅನುಮತಿ ಇಲ್ಲದೆ ಕಾರ್ಯಕ್ರಮ ನಡೆಸಲು ಮುಂದಾದರೆ ಸಂಬಂಧಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಆ.11 ಮತ್ತು ಆ.13ರಂದು ಸಲ್ಲಿಸಿರುವ ದೂರುಗಳನ್ನೂ ಅವರು ಉಲ್ಲೇಖಿಸಿದ್ದು, ಸಚಿವರ ಆ.12ರ ಆದೇಶದ ಪ್ರತಿ, ಸಂಬಂಧಿತ ಪೋಸ್ಟರ್ಗಳು ಹಾಗೂ ಜಾಹೀರಾತುಗಳ ಪ್ರತಿಗಳನ್ನು ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ. ಸಂಬಂಧಿಸಿದ ಇಲಾಖೆಗಳು ದೂರಿನ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಪರಿಸರ ಹಾಗೂ ಸಾರ್ವಜನಿಕ ಹಿತಾಸಕ್ತಿಗಾಗಿ ಕಾನೂನು ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ನಾಗರಾಜ ಕೂವೆ ಎಚ್ಚರಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.