


ಬೆಂಗಳೂರು: ಇಂಗ್ಲೆಂಡ್ನಿಂದ ದೀರ್ಘಕಾಲದ ಬಳಿಕ ಮನೆಗೆ ಮರಳಿದ ಪತಿಯ ವಿರುದ್ಧ, ತಮ್ಮ ಮನೆಯಲ್ಲೇ ಅತಿಕ್ರಮ ಪ್ರವೇಶ ಮಾಡಿದ್ದಾರೆ ಎಂದು ಪತ್ನಿ ದೂರು ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಕುನ್ದಲಹಳ್ಳಿ ನಿವಾಸಿ ಎ.ಎಲ್. ಸತ್ಯನಾರಾಯಣ ಅವರು, ಪತ್ನಿ ಸುಮಿತ್ರಾ ಸೇಪುರಿ ದಾಖಲಿಸಿರುವ ಎಫ್ಐಆರ್ ರದ್ದುಪಡಿಸುವಂತೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ಆದೇಶ ನೀಡಿದೆ.
ಅರ್ಜಿದಾರರ ಪರ ವಕೀಲರ ವಾದದ ಪ್ರಕಾರ, ಸತ್ಯನಾರಾಯಣ ಅವರು ಇಂಗ್ಲೆಂಡ್ನಲ್ಲಿ ಕೆಲಸ ಮಾಡುತ್ತಿದ್ದು, ಭಾರತಕ್ಕೆ ಮರಳಿದ ಬಳಿಕ ತಮ್ಮ ಮನೆಗೆ ತೆರಳಿದ್ದರು. ಅದಕ್ಕೂ ಮುನ್ನವೇ ಪತ್ನಿ ಅವರ ವಿರುದ್ಧ ಎಂಟು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿದ್ದರು. ಇದೀಗ ಮನೆಗೆ ಪ್ರವೇಶಿಸಿದ ಹಿನ್ನೆಲೆಯಲ್ಲಿ ಅತಿಕ್ರಮ ಪ್ರವೇಶ ಆರೋಪದಡಿ ಒಂಬತ್ತನೇ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಪತಿ ಪರ ವಕೀಲರು, ವಿವಾದಿತ ಮನೆ ಸಂಪೂರ್ಣವಾಗಿ ಸತ್ಯನಾರಾಯಣ ಅವರ ಸ್ವಯಾರ್ಜಿತ ಆಸ್ತಿಯಾಗಿದ್ದು, ಸೇಲ್ ಡೀಡ್ ಸಹ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ವಾದಿಸಿದರು.
ಇದಕ್ಕೆ ಪ್ರತಿಯಾಗಿ ಪತ್ನಿ ಪರ ವಕೀಲರು, ಮನೆ ಪತಿ-ಪತ್ನಿಯ ಜಂಟಿ ಹೆಸರಿನಲ್ಲಿ ಇದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಆದರೆ ನ್ಯಾಯಪೀಠ, ಮನೆ ಜಂಟಿ ಹೆಸರಿನಲ್ಲಿದ್ದರೂ ಪತಿಗೆ ಅದರ ಮೇಲೆ ಹಕ್ಕು ಇರುತ್ತದೆ. ತನ್ನದೇ ಮನೆಯೊಳಗೆ ಹೋದ ಕಾರಣಕ್ಕೆ ಪತಿಯ ವಿರುದ್ಧ ಅತಿಕ್ರಮ ಪ್ರವೇಶ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಅರ್ಜಿದಾರರ ಪರ ವಕೀಲರು, ಪತ್ನಿ ಒಟ್ಟು 10 ಪ್ರಕರಣಗಳನ್ನು ದಾಖಲಿಸಿದ್ದು, ಅದರ ಪರಿಣಾಮವಾಗಿ ಸತ್ಯನಾರಾಯಣ ಅವರು ಕೌಟುಂಬಿಕ ನ್ಯಾಯಾಲಯ, ಮ್ಯಾಜಿಸ್ಟ್ರೇಟ್ ನ್ಯಾಯಾಲಯ, ಸೆಷನ್ಸ್ ನ್ಯಾಯಾಲಯ ಹಾಗೂ ಹೈಕೋರ್ಟ್ಗಳಿಗೆ ನಿರಂತರವಾಗಿ ಹಾಜರಾಗಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದರು.
ಪತ್ನಿ ಕಾನೂನುಗಳನ್ನು ದುರುಪಯೋಗಪಡಿಸಿಕೊಂಡು ಪತಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂಬ ವಾದವನ್ನೂ ನ್ಯಾಯಾಲಯದ ಮುಂದೆ ಮಂಡಿಸಿದರು.
ಪ್ರಕರಣದ ಪ್ರಾಥಮಿಕ ವಿಚಾರಣೆ ನಡೆಸಿದ ಹೈಕೋರ್ಟ್, ಮಹದೇವಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅತಿಕ್ರಮ ಪ್ರವೇಶ ಎಫ್ಐಆರ್ ಕುರಿತು ತನಿಖೆಗೆ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶಿಸಿದೆ. ಪ್ರಕರಣದ ಮುಂದಿನ ವಿಚಾರಣೆ ನಂತರ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.